ಗಾಂಧೀ ಮಾದರಿಯ ಸಾಮಾಜಿಕ ವಿಮರ್ಶೆ
ಕೆಲವು ಸಾಮಾಜಿಕ ಆಚಾರಗಳನ್ನು, ಅದರಲ್ಲೂ ವಿಶೇಷವಾಗಿ ಹಿಂದೂ ಆಚಾರಗಳನ್ನು, ಗಾಂಧಿ ಟೀಕಿಸಿದ್ದಿದೆ. ಉದಾಹರಣೆಗೆ, ಅಸ್ಪೃಶ್ಯತೆ, ಪ್ರಾಣಿಹಿಂಸೆ. ಆದರೆ, ವಿಚಿತ್ರವೆಂದರೆ, ಇನ್ನು ಕೆಲವು ಸಾಮಾಜಿಕ ಆಚಾರಗಳನ್ನು, ಅದರಲ್ಲೂ ನಮಗೆ ಇವತ್ತು ವಿಕೃತವೆಂದು ಕಾಣುವಂಥವನ್ನು ಸಮರ್ಥಿಸಿದ್ದೂ ಇದೆ. ಉದಾಹರಣೆಗೆ, ವರ್ಣಾಶ್ರಮಧರ್ಮ ಮತ್ತು ಬ್ರಹ್ಮಚರ್ಯ. ಬಿಹಾರದ ಭೂಕಂಪಕ್ಕೆ ಅಸ್ಪೃಶ್ಯತೆಯ ಆಚರಣೆಯ ಪಾಪವೇ ಕಾರಣ ಎಂದೂ ಹೇಳಿದ್ದಿದೆ. ಗಾಂಧಿಯನ್ನು ಮೆಚ್ಚುವವರು ಇಂತಹ ಆಭಾಸಗಳನ್ನು ದೊಡ್ಡವರ ಸಣ್ಣ ತಪ್ಪುಗಳು ಎನ್ನುವಂತೆ ಸಂಕೋಚದಿಂದ ತೇಲಿಸುತ್ತಾರೆ. ಗಾಂಧಿಯನ್ನು ವಿಮರ್ಶಿಸುವವರು ಇದನ್ನೇ ಮುಂದುಮಾಡಿಕೊಂಡು ಗಾಂಧಿ ಆಳದಲ್ಲಿ ಎಂತಹ ಪಿತೃಪ್ರಧಾನವಾದ, ಮೇಲ್ಜಾತಿಯವರ ಪ್ರಕಾರ ಆದರ್ಶವೆಂದು ಕಾಣುವ ಒಂದು ಊಳಿಗಮಾನ್ಯ ರೀತಿಯ ಸಮಾಜದ ಪ್ರತಿಪಾದಕ ಎಂದೂ ವಾದಿಸುತ್ತಾರೆ. ಗಾಂಧಿಯ ಬಗೆಗಿನ ಗೌರವದಿಂದಲೋ ಏನೋ ಈ ಎರಡೂ ಕಡೆಯವರು ಇಷ್ಟು ಸ್ಫುಟವಾಗಿ, ಒರಟಾಗಿ ತಮ್ಮ ವಿಚಾರಗಳನ್ನು ಹೇಳದೇ ಇರಬಹುದು. ಆದರೆ ಎರಡೂ ಪಕ್ಷಗಳ ಪ್ರತಿಪಾದನೆಯ ಸಾರವಂತೂ ಸುಮಾರು ಹೀಗೆಯೇ ಇರುತ್ತದೆ. ಈ ಎರಡೂ ಪಕ್ಷಗಳು ಗಾಂಧಿಯ ವಿಚಾರದ ಆಳವನ್ನು ತಿಳಿದುಕೊಳ್ಳುವಲ್ಲಿ ಸೋತಿವೆ ಎಂದು ನನ್ನ ಅಭಿಪ್ರಾಯ. ಅಷ್ಟೇ ಅಲ್ಲ, ತಮ್ಮ ನಡುವೆ ಕೈಬದಲಾಯಿಸಿಕೊಂಡು, ಇಬ್ಬರೂ ಗಾಂಧಿಯ ವಿಚಾರಗಳನ್ನು ವಿಕೃತವಾಗಿ ವ್ಯಾಖ್ಯಾನ ಮಾಡಿದ್ದಾರೆ ಎಂದೂ ನನ್ನ ಅನಿಸಿಕೆ. ಇದನ್ನು ತೋರಿಸುವುದು ಪ್ರಸ್ತುತ